
ಸಾಮಾನ್ಯವಾಗಿ ಭಗವದ್ಗೀತೆ ಓದಲು ಪ್ರಾರಂಭಿಸುವವರು ಮೊದಲ ಅಧ್ಯಾಯಕ್ಕೆ ಹೆಚ್ಚು ಒತ್ತು ಕೊಡದೆ, ನೇರವಾಗಿ ಎರಡನೆ ಅಧ್ಯಾಯದಲ್ಲಿ- ‘ಯುದ್ಧರಂಗದಲ್ಲಿ ಗೊಂದಲಕ್ಕೊಳಗಾದ ಅರ್ಜುನನಿಗೆ ಕೃಷ್ಣನ ಉಪದೇಶದಿಂದ’ ಪ್ರಾರಂಭಿಸುತ್ತಾರೆ.
ಆದರೆ ಮೊದಲ ಅಧ್ಯಾಯದಲ್ಲಿ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳಿವೆ. ಆದ್ದರಿಂದಲೇ ಭಗವದ್ಗೀತೆಯ ಮೊದಲ ಅಧ್ಯಾಯವನ್ನು ‘ಅರ್ಜುನ ವಿಷಾದ ಯೋಗ’ ಎಂದು ಕರೆಯುವುದು.
ಈ ಅಧ್ಯಾಯದಲ್ಲಿ ಯುದ್ಧ ನಡೆಯುವ ಪೂರ್ವ ಕ್ಷಣದಲ್ಲಿ ಯುದ್ಧ ಭೂಮಿಯಲ್ಲಿ ನಿಂತಿದ್ದ ಅರ್ಜುನ ಹಾಗು ದುರ್ಯೋಧನರ ಮನಸ್ಥಿತಿ ಹೇಗಿತ್ತು ಎನ್ನುವ ಅಪೂರ್ವ ವಿಶ್ಲೇಷಣೆ ಅಡಗಿದೆ. ಅರ್ಜುನನ ಮನಸ್ಸಿನ ಗೊಂದಲಕ್ಕೆ ಶ್ರೀಕೃಷ್ಣ ಪರಿಹಾರದ ಉಪದೇಶ ಕೊಟ್ಟ, ಆದರೆ ದುರ್ಯೋಧನ ಗೊಂದಲದಿಂದಲೇ ಸತ್ತ. ಆದ್ದರಿಂದ ಮೊದಲ ಅಧ್ಯಾಯವನ್ನು ನಾವು ಐತಿಹಾಸಿಕ ದೃಷ್ಟಿಯಿಂದ ಕಾಣದೆ ಇಲ್ಲಿರುವ ಮನಃಶಾಸ್ತ್ರವನ್ನು ಅರಿಯಲು ಪ್ರಯತ್ನಿಸಬೇಕು. ಇಲ್ಲಿ ಹೇಳಿರುವ ಮನಃಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟಿದ್ದು. ಈ ಎಚ್ಚರದಿಂದ ಇಲ್ಲಿ ಬರುವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಮಗೆ ಈ ಅಧ್ಯಾಯ ಅರ್ಥವಾಗುತ್ತದೆ.
ಭಗವದ್ಗೀತೆ ಪ್ರಾರಂಭವಾಗುವುದು ಧೃತರಾಷ್ಟ್ರನ ಪ್ರಶ್ನೆಯಿಂದ. ಧೃತರಾಷ್ಟ್ರ ಎಂದರೆ ರಾಷ್ಟ್ರವನ್ನು ಧಾರಣೆ ಮಾಡಿದವ ಎಂದರ್ಥ. ಅಂದರೆ ಸತ್ಯದ ಬಗ್ಗೆ ಕುರುಡಾಗಿ ಕಣ್ಮುಚ್ಚಿ ಮಲಗಿರುವ ಆತ್ಮವೇ ಧೃತರಾಷ್ಟ್ರ. ಇನ್ನು ದುರ್ಯೋಧನ ಎನ್ನುವುದು ನಮ್ಮೊಳಗಿರುವ ದುಷ್ಟತನದ ಸಂಕೇತ. ಭೀಷ್ಮ,ದ್ರೋಣ,ಕೃಪಾ,ಶಲ್ಯ,ಕರ್ಣ ಇವರೆಲ್ಲರೂ ನಮ್ಮ ಇಂದ್ರಿಯಗಳಂತೆ. ನಮ್ಮ ಮನಸ್ಸಿನಲ್ಲಿರುವ ಕೆಟ್ಟತನದಿಂದ ನಾವು ನಮ್ಮಲ್ಲಿರುವ ಅಮೂಲ್ಯವಾದ ಇಂದ್ರಿಯಗಳನ್ನು ಕೆಟ್ಟ ಕಾರ್ಯಕ್ಕೆ ಬಳಸುತ್ತೇವೆ. ಆದರೆ ಇಂದ್ರಿಯಗಳು ಕೆಟ್ಟವಲ್ಲ. ಆದರೆ ಕೆಟ್ಟದ್ದರ ಜೊತೆ ಸೇರಿ ಕೆಟ್ಟದ್ದನ್ನು ಮಾಡುತ್ತವೆ. ಈ ರೀತಿ ಗೀತೆಯ ಪ್ರತಿಯೊಂದು ಶ್ಲೋಕದಲ್ಲಿ, ಮಹಾಭಾರತದ ಪ್ರತಿಯೊಂದು ಪಾತ್ರದಲ್ಲಿ ಅತ್ಯಮೂಲ್ಯವಾದ ಹಾಗು ಅದ್ಭುತವಾದ ಅರ್ಥ ಅಡಗಿದೆ.
ಬನ್ನಿ ಮೊದಲ ಅಧ್ಯಾಯವನ್ನು ಪ್ರಾರಂಭಿಸೋಣ.
ಅಧ್ಯಾಯ 1 – ಶ್ಲೋಕ 1
ಧೃತರಾಷ್ಟ್ರ ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ
ಇದರ ಅರ್ಥ ಈ ರೀತಿ ಇದೆ.
ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡುತ್ತಿದ್ದಾರೆ ಸಂಜಯ..?
ಇದರ ಸಂಪೂರ್ಣ ವಿವರಣೆ ಈ ರೀತಿ ಇದೆ.
ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ ‘ಆತ್ಮದ’ ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯವು ಕೂಡಾ ನಮಗೆ ಗೊತ್ತಿಲ್ಲ.
ಆದ್ದರಿಂದಲೇ ಭಗವದ್ಗೀತೆಯು ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ.ಕಣ್ಣು ಕಾಣದ ಧೃತರಾಷ್ಟ್ರನು ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವೇದವ್ಯಾಸರಿಂದ ಪಡೆದ ಸಂಜಯ ಮಹೋದಯ ಅವರಲ್ಲಿ ಕೇಳಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ.
ಪರಶುರಾಮನಿಂದ ಐದು ಸರೋವರಗಳ ಮಧ್ಯೆ ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ, ಆನಂತರ ‘ಕುರು’ ಎನ್ನುವ ರಾಜನ ಕಾಲದಲ್ಲಿ ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು. ಇದನ್ನೇ ಇಲ್ಲಿ “ಧರ್ಮಕ್ಷೇತ್ರೇ ಕುರುಕ್ಷೇತ್ರೇ” ಎಂದು ಸಂಬೋಧಿಸಿದ್ದಾರೆ. ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವುದೇ ಮನಸ್ಸು, ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ.
ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯ ಮಹೋದಯರಲ್ಲಿ ಕೇಳುತ್ತಾನೆ “ಹೋರಾಟ ಬಯಸಿ ಎದುರುಬದುರಾದ ‘ನನ್ನವರು’ ಮತ್ತು ‘ಪಾಂಡವರು’ ಏನು ಮಾಡುತ್ತಿದ್ದಾರೆ..?” ಎಂದು. ಇಲ್ಲಿ ‘ನನ್ನವರು ಮತ್ತು ಪಾಂಡವರು’ ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.
ಪ್ರೇರಣೆ – ಬನ್ನಂಜೆ ಗೋವಿಂದಾಚಾರ್ಯರು
ಪ್ರತಿದಿನ ಭಗವದ್ಗೀತೆ ಓದಲು Visit Karunadu Today
Click here to Join Our Whatsapp Group